
9th June 2025
⭐ ಬೆಳಗಾವಿ ಜಿಲ್ಲಾ ಕ ಸಾ ಪ ವತಿಯಿಂದ ಸಾಹಿತ್ಯದ ಚಿಂತನ ಮಂಥನ ಕಾರ್ಯಕ್ರಮ - ನೀಲಗಂಗಾ ಚರಂತಿಮಠರ ಸಾಹಿತ್ಯ ಸೇವೆ ಅಗಣಿತೀಯವಾದದ್ದು - ಸಾಹಿತಿ ಸುನಂದ ಎಮ್ಮಿ ಅಭಿಮತ⭐
ಸಾಹಿತ್ಯದಎಲ್ಲ ಪ್ರಕಾರಗಳಲ್ಲಿ ನೂರಕ್ಕೂ ಹೆಚ್ಚು ಕೃತಿ ರಚಿಸಿ ನಮ್ಮ ಸಹಜ ಬದುಕಿನ ಜೀವಂತಿಕೆಯನ್ನು ತಮ್ಮ ಕೃತಿಗಳಲ್ಲಿ ತೋರಿಸಿದ ನೀಲಗಂಗಾ ಚರಂತಿಮಠರ ಸಾಹಿತ್ಯ ಸೇವೆ ನಿಜಕ್ಕೂ ಅಗಣಿತೀಯವಾದದ್ದು ಎಂದು ಹಿರಿಯ ಸಾಹಿತಿ ಸುನಂದಾ ಎಮ್ಮಿ ರವಿವಾರ ದಿ 8 ರಂದು ಬೆಳಗಾವಿ ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕ ಸಾ ಪ ಮತ್ತು ಕನ್ನಡ ಸಾಂಸ್ಕೃತಿಕ ಭವನದ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಬೆಳಗಾವಿ ಜಿಲ್ಲೆಯ ಸಾಹಿತಿಗಳ ಸಾಹಿತ್ಯದ ಚಿಂತನ ಮಂಥನ ' ನುಡಿ ತೆರಿಗೆ ನೂರೊಂದು ನಮನ ' ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ನೀಲಗಂಗಾ ಚರಂತಿಮಠ ಅವರ ಬದುಕು ಬರಹ ಕುರಿತಾಗಿ ವಿಶೇಷ ಉಪನ್ಯಾಸ ಕೊಡುತ್ತಾ ಮಾತನಾಡಿದರು. ನೀಲಗಂಗಾ ರವರು ಚುಟುಕು, ಮಕ್ಕಳ ಸಾಹಿತ್ಯ, ಪರಿಸರ,ಯಾತ್ರೆ,ಕಾದಂಬರಿ ಚರಿತ್ರೆ,ಶರಣ ಸಾಹಿತ್ಯ, ಕೃಷಿ, ಆರೋಗ್ಯ,ನೆಲ,ಜಲ ದೇಶಾಭಿಮಾನ, ಬದುಕು, ಸ್ತ್ರೀ ಹೀಗೆ ವಿವಿಧ ವಿಷಯಗಳ ಕುರಿತು ತಮ್ಮದೇ ಆದ ಕೃತಿಗಳನ್ನು ರಚಿಸಿದ್ದಾರೆ. ಪ್ರತಿ ಕಾವ್ಯ ರಚಿಸುವಾಗ ಅದರ ಕುರಿತು ನೈಜ ಸಂಶೋಧನೆ ಮಾಡಿ ರಚಿಸುವ ಅವರ ಸಂಶೋಧನಾ ಮನೋಭಾವ ಕಿರಿಯರಿಗೆ ಮಾದರಿಯಾಗಿದೆ.ಮುಕ್ತಾಂಗನೆ ಎಂಬ ಬೃಹತ್ ಕಾವ್ಯವನ್ನು ಸಹ ರಚಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿಯಾಗಿ ಕನ್ನಡ ಸಾಹಿತ್ಯ ಭವನ, ಗಾಂಧೀ ಸ್ಮಾರಕ ಭವನ, ಕುಮಾರ ಗಂಧರ್ವ ರಂಗ ಮಂದಿರ ಮುಂತಾದವುಗಳ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಲ್ಲದೆ ಕಿತ್ತೂರು ಉತ್ಸವ ಬೆಳವಡಿ ಮಲ್ಲಮ್ಮ ಉತ್ಸವಗಳು ಕೂಡ ಇವರ ಕಾರ್ಯಾವಧಿಯಲ್ಲಿಯೇ ಪ್ರಾರಂಭವಾಗಿವೆ ಎಂಬುದು ಸಹ ಇವರ ನಾಡು ನುಡಿಗೆ ಇರುವ ಕಳಕಳಿಗೆ ಸಾಕ್ಷಿಯಾಗಿವೆ. ಇವರ ಅನನ್ಯಸೇವೆಗೆ ಅನೇಕ ಸಂಘ ಸಂಸ್ಥೆ, ಸರ್ಕಾರದ ವತಿಯಿಂದ ಪ್ರಶಸ್ತಿಗಳು ಲಭಿಸಿವೆ ಎಂದು ಅವರ ಬದುಕು ಬರಹ ಕುರಿತು ವಿವರಿಸಿದರು.
ಜಿಲ್ಲಾ ಘಟಕದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ನೀಲಗಂಗಾ ಚರಂತಿಮಠ ಜೀವನದ ಮೌಲ್ಯಗಳನ್ನು ಕೃತಿಗಳಿಂದ ಕಟ್ಟುವ ಕೆಲಸ ಮಾಡಿದ್ದೇನೆ ಇನ್ನೂ ಮಾಡುವದು ಸಾಕಷ್ಟಿದೆ ಎಂದರು. ಜಿಲ್ಲಾ ಘಟಕದ ಕಾರ್ಯದರ್ಶಿಎಂ. ವೈ. ಮೆಣಸಿನಕಾಯಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಹಕಾರ್ಯದರ್ಶಿ ವೀರಭದ್ರ ಅಂಗಡಿ,ಆರ್ ಬಿ ಬನಶಂಕರಿ ಸುರೇಶ ನರಗುಂದ, ಬಿ ಬಿ ಮಠಪತಿ, ಸುಧಾ ಪಾಟೀಲ ವಾಸಂತಿ ಮೇಳೇದ,ಎಂ. ಎ. ದೇಸಾಯಿ, ನಿತಿನ್ ಮೆಣಸಿನಕಾಯಿ, ಜಿ ಎಸ್ ರೇವಣ್ಣವರ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಶಿವಾನಂದ ತಲ್ಲೂರ ಸ್ವಾಗತಿಸಿದರು ಜ್ಯೋತಿ ಬದಾಮಿ ಪರಿಚಯಿಸಿದರು, ಡಾ.ಹೇಮಾ ಸೋನೋಳ್ಳಿ ನಿರೂಪಿಸಿದರು. ದೀಪಿಕಾ ಚಾಟೆ ವಂದಿಸಿದರು.